ಪುಣೆ : ಬೆಂಗಳೂರಿನ ಸಿರಿಕಲಾ ಮೇಳದ ಮಹಿಳಾ ಕಲಾವಿದರ ಯಕ್ಷಗಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಸೆಪ್ಟೆ೦ಬರ್ 10 , 2015
|
ಸೆಪ್ಟೆ೦ಬರ್ 10, 2015
|
ಪುಣೆ : ಬೆಂಗಳೂರಿನ ಸಿರಿಕಲಾ ಮೇಳದ ಮಹಿಳಾ ಕಲಾವಿದರ ಯಕ್ಷಗಾನ
ಪುಣೆ :
ಹವ್ಯಕ ಸಂಸ್ಥೆ ಪುಣೆ ವತಿಯಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮ ವಾರ್ಜೆಯ ಬಯಾಫ್ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಜರಗಿತು. ಮುಖ್ಯ ಆಕರ್ಷಣೆಯಾಗಿ ಬೆಂಗಳೂರಿನ ಸಿರಿಕಲಾ ಮೇಳ ಹಾಗೂ ಅತಿಥಿ ಕಲಾವಿದರಿಂದ ಬಡಗುತಿಟ್ಟಿನ ದಕ್ಷಯಜ್ಞ ಯಕ್ಷಗಾನ ಪ್ರದರ್ಶನಗೊಂಡಿತು. ಗಂಡು ಕಲೆ ಎಂದೇ ಪ್ರಸಿದ್ಧಿ ಹೊಂದಿರುವ ಈ ಯಕ್ಷಗಾನ ಪ್ರದರ್ಶನದಲ್ಲಿ ಮಹಿಳಾ ಕಲಾವಿದರೇ ತುಂಬಿರುವುದು ವಿಶೇಷತೆಯಾಗಿತ್ತು. ಮಹಿಳೆಯರೇ ಪ್ರಧಾನ ಪಾತ್ರಗಳಲ್ಲಿ ಮೇಳೈಸಿ ಎಲ್ಲರ ಮನಗೆದ್ದು ಪುರುಷರಿಗಿಂತ ನಾವು ಕಡಿಮೆಯಿಲ್ಲ ಎಂಬುವುದನ್ನು ನಿರೂಪಿಸಿದರು.
ದಕ್ಷನಾಗಿ ಪ್ರಸಿದ್ಧ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಪುತ್ರಿ ಅಶ್ವಿನಿ ಕೊಂಡದಕುಳಿ ಹಾಗೂ ಶಿವನ ಪಾತ್ರದಲ್ಲಿ ಸೌಮ್ಯಾ ಅರುಣ್ ಮಿಂಚಿದರು. ದಾಕ್ಷಾಯಿಣಿ ಪಾತ್ರದಲ್ಲಿ ದೂರದರ್ಶನ ಕಲಾವಿದೆ, ಪ್ರಸಂಗ ಕರ್ತೆ ಅರ್ಪಿತಾ ಹೆಗಡೆ ಅವರು ಅಭಿನಯಿಸಿದರು.
ದೇವೇಂದ್ರನಾಗಿ ಕು| ಮಾನಸ ಉಪಾಧ್ಯ, ಬ್ರಾಹ್ಮಣನಾಗಿ ಶ್ರೀಧರ ಭಟ್ ಕಾಸರಗೋಡು ಹಾಗೂ ವೀರಭದ್ರನಾಗಿ ಅನಂತ ಹೆಗಡೆ ಗದ್ದೆ ಪಾಲ್ಗೊಂಡಿದ್ದರು. ಹಿಮ್ಮೇಳದಲ್ಲಿ ಖ್ಯಾತ ಭಾಗವತ ಕೊಳಗಿ ಕೇಶವ ಹೆಗಡೆ ಭಾಗವತಿಕೆಯಲ್ಲಿ, ಮದ್ದಳೆಯಲ್ಲಿ ಎ . ಪಿ. ಪಾಠಕ್ ಹಾಗೂ ಚೆಂಡೆಯಲ್ಲಿ ಶ್ರೀನಿವಾಸ ಪ್ರಭು ಸಹಕರಿಸಿದರು.
ಇದೇ ಸಂದರ್ಭದಲ್ಲಿ ಹವ್ಯಕ ಪುಣೆಯ ವತಿಯಿಂದ ಯಕ್ಷಗಾನ ಕಲಾವಿದ, ನಾಟ್ಯಗುರು ಮದಂಗಲ್ಲು ಆನಂದ ಭಟ್ ಅವರು ಸಿರಿಕಲಾ ಮೇಳ ಬೆಂಗಳೂರು ಇದರ ಸಂಚಾಲಕ ಕಡತೋಕ ಸುರೇಶ್ ಹೆಗಡೆ ಅವರ ಪತ್ನಿ ಶ್ರೀದೇವಿ ಹೆಗಡೆ ಅವರನ್ನು ಗೌರವಿಸಿದರು.
ಎಲ್ಲ ಮಹಿಳಾ ಕಲಾವಿದರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸ ಲಾಯಿತು. ಸಮಾರಂಭದಲ್ಲಿ ಪ್ರತಿಭಾವಂತ ಮಕ್ಕಳಾದ ಕು| ಅಭಿಜ್ಞಾ ಹೆಗಡೆ, ಕು| ಅಂಕಿತಾ ಗಿರಿಧರ್, ಕು| ಚೈತ್ರಾ ಭಟ್, ಕು| ಕಾವ್ಯಾ ಹೆಗಡೆ, ತೇಜಸ್ ಭಟ್, ಕು| ಅನನ್ಯಾ ಶರ್ಮ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಎಸ್. ಪಂಡಿತ್ ಅವರು ಯಕ್ಷಗಾನ ಕಲಾವಿದರ ಸಾಧನೆಯನ್ನು ಶ್ಲಾಘಿಸಿದರು.
ಬಯಾಫ್ ಸಂಸ್ಥೆಯ ನಿರ್ದೇಶಕ ಎನ್. ಜಿ. ಹೆಗಡೆ, ಹವ್ಯಕ ಪುಣೆಯ ನಿಕಟಪೂರ್ವ ಅಧ್ಯಕ್ಷ ಪಿ. ಎಂ. ಭಟ್ ಹಾಗೂ ಎಲ್. ಎಸ್. ಹೆಗಡೆ. ಎಸ್. ಆರ್. ಹೆಗಡೆ ಮೊದಲಾದವರ ಉಪಸ್ಥಿತಿಯಲ್ಲಿ ನಡೆದ ಈ ಯಕ್ಷಗಾನ ಪ್ರದರ್ಶನವು ಪುಣೆ ಸಮಾಜ ಬಾಂಧವರಿಗೆ ವಿಶೇಷ ಅನುಭವವನ್ನು ನೀಡಿತು. ಯಕ್ಷಗಾನದ ಮಧ್ಯೆ ನಡೆದ ಪ್ರತಿಭಾ ಪುರಸ್ಕಾರವು ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಕೃಪೆ :
udayavani.com
|
|
|